ವಿಪಶ್ಯನ ಧ್ಯಾನ: ವೈದ್ಯರ ವೈಜ್ಞಾನಿಕ ಮಾರ್ಗದರ್ಶಿ ಮತ್ತು ಅನುಭವ

ವಿಪಶ್ಯನ (Vipassana) ಎಂಬುದು ಪುರಾತನ ಪಾಲಿ ಭಾಷೆಯ ಶಬ್ದ. ಇದರ ಅರ್ಥ “ಒಳನೋಟ” ಅಥವಾ “ವಸ್ತುಗಳನ್ನು/ವಿಷಯಗಳನ್ನು ಅವು ಇದ್ದಂತೆಯೇ ನೋಡುವುದು ಅಥವಾ ಅರಿಯುವುದು” ಎಂದಾಗುತ್ತದೆ. ಇದು ಭಾರತದ ಅತ್ಯಂತ ಪ್ರಾಚೀನ ಧ್ಯಾನ ಪದ್ಧತಿಗಳಲ್ಲಿ ಒಂದಾಗಿದೆ 1. ಇಂದು ಅನೇಕರು ಧ್ಯಾನ ಎಂದರೆ ಕೇವಲ ವಿಶ್ರಾಂತಿ ಪಡೆಯುವುದು ಅಥವಾ ಒತ್ತಡ ಕಡಿಮೆ ಮಾಡಿಕೊಳ್ಳಲು ಮಾಡುವ ಪ್ರಯತ್ನ ಎಂದು ಭಾವಿಸುತ್ತಾರೆ, ಆದರೆ ವಿಪಶ್ಯನವು ಅದಕ್ಕಿಂತ ಆಳವಾದ ಪ್ರಕ್ರಿಯೆಯಾಗಿದೆ.
Prefer to read this in English?
ಇದನ್ನು ಇಂಗ್ಲಿಷಿನಲ್ಲಿ ಓದಬೇಕೇ?
ಸುಮಾರು 2,500 ವರ್ಷಗಳ ಹಿಂದೆ ಗೌತಮ ಬುದ್ಧನು ಈ ಕ್ರಮವನ್ನು ಪುನಃ ಕಂಡುಹಿಡಿದನು. ಇದನ್ನು ಅವನು ಯಾವುದೇ ಧಾರ್ಮಿಕ ಆಚರಣೆಯಾಗಿ ಕಲಿಸಲಿಲ್ಲ, ಬದಲಿಗೆ ಇದೊಂದು ‘ಜೀವನ ಕಲೆ’ (art of living) ಎಂದು ಬೋಧಿಸಿದನು. ಒತ್ತಡ, ಕೋಪ ಮತ್ತು ಅಸಮಾಧಾನದಂತಹ ಸಾರ್ವತ್ರಿಕ ಸಮಸ್ಯೆಗಳಿಗೆ ಇದೊಂದು ಸಾರ್ವತ್ರಿಕ ಪರಿಹಾರವಾಗಿದೆ. ಮನಸ್ಸನ್ನು ಶಾಂತಗೊಳಿಸಲು ಯಾವುದಾದರೂ ರೂಪವನ್ನು ಕಲ್ಪಿಸಿಕೊಳ್ಳುವ ಅಥವಾ ಮಂತ್ರವನ್ನು ಪಠಿಸುವ ಇತರ ವಿಧಾನಗಳಿಗಿಂತ ಇದು ಭಿನ್ನವಾಗಿದೆ. ವಿಪಶ್ಯನವು ಒಂದು ಸಂಪೂರ್ಣ ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನವಾಗಿದೆ. ಇದು ನಮ್ಮ ಮನಸ್ಸು ಮತ್ತು ದೈಹಿಕ ಸಂವೇದನೆಗಳ (sensations) ನಡುವಿನ ಆಳವಾದ ಸಂಬಂಧವನ್ನು ಗಮನಿಸಲು ಇಡೀ ದೇಹವನ್ನು ವ್ಯವಸ್ಥಿತವಾಗಿ ಸ್ಕ್ಯಾನ್ ಮಾಡುವುದನ್ನು ಒಳಗೊಂಡಿರುತ್ತದೆ. ರಾಗ (ಬಯಕೆ) ಮತ್ತು ದ್ವೇಷದಂತಹ ಮಾನಸಿಕ ಕಲ್ಮಶಗಳನ್ನು ಅವುಗಳ ಮೂಲದಲ್ಲಿಯೇ ತೆಗೆದುಹಾಕುವುದು ಇದರ ಅಂತಿಮ ಗುರಿಯಾಗಿದೆ 2.
ನಾನು 2022 ರಲ್ಲಿ 10 ದಿನಗಳ ವಿಪಶ್ಯನ ಶಿಬಿರವನ್ನು ಪೂರೈಸಿದೆ. ದಿನಕ್ಕೆ ಕೆಲವೇ ನಿಮಿಷಗಳ ಕಾಲ ಮೊಬೈಲ್ ಆಪ್ ಬಳಸಿ ಮಾಡುವ ಧ್ಯಾನಕ್ಕಿಂತ ಇದು ತುಂಬಾ ಭಿನ್ನವಾಗಿದೆ ಎಂದು ನಾನು ಹೇಳಬಲ್ಲೆ. ವಿಪಶ್ಯನವು ಒಂದು ತೀವ್ರವಾದ ಮಾನಸಿಕ ತರಬೇತಿಯಾಗಿದೆ. ವಸತಿ ಶಿಬಿರದಲ್ಲಿ ಪ್ರತಿದಿನ ಸುಮಾರು 10 ಗಂಟೆಗಳ ಕಾಲ ಧ್ಯಾನ ಮಾಡಿದಾಗ, ನಿಮ್ಮ ಮೆದುಳಿನಲ್ಲಿ ಆಗುವ ಬದಲಾವಣೆಗಳನ್ನು ನಮ್ಮ ಸಾಮಾನ್ಯ, ಒತ್ತಡದ ಜೀವನದಲ್ಲಿ ಪಡೆಯುವುದು ಕಷ್ಟ. ಇದು ಒಂದು ರಜಾಕಾಲದ ಆರಾಮ-ವಿಹಾರದಂತೆ ಭಾಸವಾಗುವುದಿಲ್ಲ, ಬದಲಿಗೆ ಹಳೆಯ ಅಭ್ಯಾಸಗಳನ್ನು ತೆಗೆದುಹಾಕಲು ಮನಸ್ಸಿಗೆ ಮಾಡುವ ಒಂದು ಆಳವಾದ ಶಸ್ತ್ರಚಿಕಿತ್ಸೆಯಂತೆ ಭಾಸವಾಗುತ್ತದೆ.
ಕಳೆದ 30ಕ್ಕೂ ಹೆಚ್ಚು ವರ್ಷಗಳ ಅಭ್ಯಾಸದಿಂದ, ಮತ್ತು ಕೇವಲ 10 ದಿನಗಳ ಶಿಬಿರಗಳಲ್ಲದೆ, ಮುಂದುವರಿದ 20 ದಿನಗಳ ಹಾಗೂ 30 ದಿನಗಳ ದೀರ್ಘಾವಧಿಯ ಶಿಬಿರಗಳನ್ನು ಪೂರೈಸಿದ ಅನುಭವದಿಂದ ಹೇಳುವುದಾದರೆ, ನಾನು ದೈಹಿಕ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ ಎರಡರಲ್ಲೂ ಆಳವಾದ ಮತ್ತು ದೀರ್ಘಕಾಲೀನ ಪ್ರಯೋಜನಗಳನ್ನು ಕಂಡುಕೊಂಡಿದ್ದೇನೆ.
10-ದಿನಗಳ ಶಿಬಿರದ ಸ್ವರೂಪ
ಹೊಸದಾಗಿ ಕಲಿಯುವವರಿಗೆ ವಿಪಶ್ಯನವನ್ನು ಕರಗತ ಮಾಡಿಕೊಳ್ಳಲು 10 ದಿನಗಳ ವಸತಿ ಶಿಬಿರದಲ್ಲಿ ಭಾಗವಹಿಸುವುದು ಏಕೈಕ ಮಾರ್ಗವಾಗಿದೆ. ಮನಸ್ಸು ಶಾಂತವಾಗಲು, ಏಕಾಗ್ರತೆ ಪಡೆಯಲು ಮತ್ತು ಈ ಕ್ರಮವನ್ನು ಸರಿಯಾಗಿ ಅಭ್ಯಾಸ ಮಾಡುವಂತೆ ಮನಸ್ಸು ತೀಕ್ಷ್ಣವಾಗಲು ಈ ಕನಿಷ್ಟ 10-ದಿನದ ಅವಧಿಯ ಅಗತ್ಯವಿದೆ 1.
- ದಿನ 0 (ಆಗಮನ): ನೀವು ಕೇಂದ್ರಕ್ಕೆ ತಲುಪುತ್ತೀರಿ. ನಿಮ್ಮ ಬೆಲೆಬಾಳುವ ವಸ್ತುಗಳು, ಎಲೆಕ್ಟ್ರಾನಿಕ್ ಸಾಧನಗಳು (ಮೊಬೈಲ್ ಇತ್ಯಾದಿ) ಮತ್ತು ಓದುವ/ಬರೆಯುವ ಸಾಮಗ್ರಿಗಳನ್ನು ಸುರಕ್ಷಿತವಾಗಿಡಲು ಒಪ್ಪಿಸಬೇಕು (ಇದು ಗಂಭೀರವಾದ ಧ್ಯಾನದ ಸಮಯದಲ್ಲಿ ಗಮನ ಬದಲಾಗುವುದನ್ನು ತಪ್ಪಿಸಲು ಸಹಾ ಸಹಕಾರಿಯಾಗುತ್ತದೆ). ನಂತರ ನಿಮಗೆ ಶಿಬಿರದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇಂದಿನಿಂದಲೇ “ಆರ್ಯ ಮೌನ” (noble silence) ಪ್ರಾರಂಭವಾಗುತ್ತದೆ. ಅಂದರೆ ನೀವು ಮಾತನಾಡುವುದು, ಸಂಜ್ಞೆ ಮಾಡುವುದು ಅಥವಾ ಇತರ ವಿದ್ಯಾರ್ಥಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ಕೂಡ ಕಟ್ಟುನಿಟ್ಟಾಗಿ ತ್ಯಜಿಸಬೇಕು. ಇದು ನಿಮ್ಮ ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ.
- ದಿನ 1–3 (ಆನಾಪಾನ ಧ್ಯಾನ): ಮೊದಲ ಮೂರು ದಿನಗಳು, ನೀವು ನಿಮ್ಮ ಉಸಿರಾಟದ ನೈಸರ್ಗಿಕ ಹರಿವಿನ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತೀರಿ. ಈ ಅಭ್ಯಾಸವು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ತೀಕ್ಷ್ಣಗೊಳಿಸಲು (ಸಮಾಧಿ) ಸಹಾಯ ಮಾಡುತ್ತದೆ, ಇದರಿಂದ ನಂತರದ ಸೂಕ್ಷ್ಮ ಸತ್ಯಗಳನ್ನು ನೀವು ಗಮನಿಸಬಹುದು.
- ದಿನ 4 (ವಿಪಶ್ಯನ ದಿನ): ಈ ದಿನದಂದು ನಿಜವಾದ ವಿಪಶ್ಯನ ಕ್ರಮವನ್ನು ಪರಿಚಯಿಸಲಾಗುತ್ತದೆ. ದೇಹದಾದ್ಯಂತ ಉಂಟಾಗುವ ಸಂವೇದನೆಗಳಿಗೆ ಪ್ರತಿಕ್ರಿಯಿಸದೆ, ಸಮಚಿತ್ತತೆಯನ್ನು ಕಾಯ್ದುಕೊಂಡು ಅವುಗಳನ್ನು ಕೇವಲ ಗಮನಿಸುವುದನ್ನು ನೀವು ಕಲಿಯುತ್ತೀರಿ. ಇದು ಭಯ ಮತ್ತು ಆತಂಕದಂತಹ ಮಾನಸಿಕ ಕಲ್ಮಶಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
- ದಿನ 5–9 (ಆಳವಾದ ಅಭ್ಯಾಸ): ನೀವು ತಲೆಯಿಂದ ಕಾಲಿನವರೆಗೆ ನಿಮ್ಮ ದೇಹವನ್ನು ಸ್ಕ್ಯಾನ್ ಮಾಡುವುದನ್ನು ಮುಂದುವರಿಸುತ್ತೀರಿ. ನೀವು “ಸಮಚಿತ್ತತೆ”ಯನ್ನು (equanimity) ಅಭ್ಯಾಸ ಮಾಡುತ್ತೀರಿ – ಅಂದರೆ ಹಿತಕರವಾದ ಸಂವೇದನೆಗಳಿಗೆ ಆಸೆಪಡುವುದಿಲ್ಲ ಮತ್ತು ಅಹಿತಕರವಾದ ಸಂವೇದನೆಗಳನ್ನು ದ್ವೇಷಿಸುವುದಿಲ್ಲ.
- ದಿನ 10 (ಮೈತ್ರಿ): ಕೊನೆಗೂ ಮೌನ ಮುರಿಯಲಾಗುತ್ತದೆ. ನಿಮ್ಮ ಶಾಂತಿ ಮತ್ತು ಸಂತೋಷವನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ‘ಮೈತ್ರಿ ಭಾವನೆ’ (ಪ್ರೀತಿ ಮತ್ತು ಕರುಣೆಯ ಧ್ಯಾನ) ಯನ್ನು ನಿಮಗೆ ಕಲಿಸಲಾಗುತ್ತದೆ.
ನರವಿಜ್ಞಾನ: ಇದು ಮೆದುಳನ್ನು ಹೇಗೆ ಬದಲಾಯಿಸುತ್ತದೆ?
ವಿಪಶ್ಯನವು ಮೆದುಳಿನ ಮೇಲೆ ಭೌತಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಆಧುನಿಕ ವೈದ್ಯಕೀಯ ವಿಜ್ಞಾನ ಈಗ ಅರ್ಥಮಾಡಿಕೊಳ್ಳಲಾರಂಭಿಸಿದೆ. ಫಂಕ್ಷನಲ್ ಇಮೇಜಿಂಗ್ (functional imaging) ಬಳಸಿದ ಸಂಶೋಧನೆಗಳು ಈ ತೀವ್ರವಾದ ಅಭ್ಯಾಸವು ನಮ್ಮ ಮೆದುಳಿನ ಜಾಲಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ದೀರ್ಘಕಾಲೀನ ಬದಲಾವಣೆಗಳನ್ನು ಉಂಟುಮಾಡಬಹುದು ಎಂದು ತೋರಿಸಿವೆ 3.
| ಮೆದುಳಿನ ಭಾಗ | ಏನಾಗುತ್ತದೆ? | ಇದು ನಮಗೆ ಹೇಗೆ ಸಹಾಯ ಮಾಡುತ್ತದೆ? |
|---|---|---|
| ಡಿಫಾಲ್ಟ್ ಮೋಡ್ ನೆಟ್ವರ್ಕ್ (DMN) | ಈ ಜಾಲದ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗುತ್ತದೆ. | DMN ನಮ್ಮ “ಚಂಚಲ ಮನಸ್ಸಿಗೆ” ಕಾರಣವಾಗಿದೆ – ಅಂದರೆ ನಿರಂತರವಾಗಿ ಹರಿದಾಡುವ ಆಲೋಚನೆಗಳು ಮತ್ತು ನಮ್ಮ ಬಗ್ಗೆ ನಾವೇ ಚಿಂತಿಸುವುದು. ಇದರ ಚಟುವಟಿಕೆ ಕಡಿಮೆಯಾದಾಗ ಮನಸ್ಸು ಶಾಂತವಾಗುತ್ತದೆ. |
| ಇನ್ಸುಲಾ ಮತ್ತು ಸೊಮಾಟೊಸೆನ್ಸರಿ ಕಾರ್ಟೆಕ್ಸ್ | ಈ ಪ್ರದೇಶಗಳು ಹೆಚ್ಚು ಸಕ್ರಿಯವಾಗುತ್ತವೆ ಮತ್ತು ಅಭಿವೃದ್ಧಿಗೊಳ್ಳುತ್ತವೆ. | ಮೆದುಳಿನ ಈ ಭಾಗಗಳು ನಮ್ಮ ದೇಹದ ಆಂತರಿಕ ಸ್ಥಿತಿಗಳನ್ನು ಅನುಭವಿಸಲು ಸಹಾಯ ಮಾಡುತ್ತವೆ. ಇದು ಉತ್ತಮ “ದೇಹದ ಅರಿವು” ಮೂಡಲು ಕಾರಣವಾಗುತ್ತದೆ. |
| ಪ್ರೀಫ್ರಂಟಲ್ ಕಾರ್ಟೆಕ್ಸ್ (ಮೆದುಳಿನ ಮುಂಭಾಗ) | ನಿರ್ಧಾರ ತೆಗೆದುಕೊಳ್ಳಲು ಬಳಸುವ ಈ ಭಾಗವು ಬಲಗೊಳ್ಳುತ್ತದೆ. | ಇದು ನಮ್ಮ ಭಾವನೆಗಳನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದ್ದರಿಂದ ನಾವು ಸಂದರ್ಭಗಳಿಗೆ ಆತುರದಿಂದ ಪ್ರತಿಕ್ರಿಯಿಸುವುದಿಲ್ಲ. |
| ಅಮಿಗ್ಡಲಾ (Amygdala) | ಈ “ಭಯದ ಕೇಂದ್ರ”ದ ಪ್ರತಿಕ್ರಿಯೆ ಕಡಿಮೆ ಆಗುತ್ತದೆ. | ಇದರ ಪರಿಣಾಮವಾಗಿ ದಿನನಿತ್ಯದ ಜೀವನದಲ್ಲಿ ಭಯ ಮತ್ತು ಆತಂಕದ ಪ್ರತಿಕ್ರಿಯೆಗಳು ಕಡಿಮೆಯಾಗುತ್ತವೆ. |
ವೈದ್ಯಕೀಯ ಉಪಯೋಗಗಳು ಮತ್ತು ಪುರಾವೆಗಳು
ವಿಪಶ್ಯನ ಕೇವಲ ಆಧ್ಯಾತ್ಮಿಕ ಬೆಳವಣಿಗೆಗೆ ಮಾತ್ರವಲ್ಲ… ಇದು ಸಾಬೀತಾದ ವೈದ್ಯಕೀಯ ಪ್ರಯೋಜನಗಳನ್ನು ಹೊಂದಿದೆ, ವಿಶೇಷವಾಗಿ ಸಾಮಾನ್ಯ ಚಿಕಿತ್ಸಾ ಪದ್ಧತಿಗಳು ಸಂಪೂರ್ಣ ಪರಿಹಾರ ನೀಡಲು ಕಷ್ಟಪಡುವ ಕ್ಷೇತ್ರಗಳಲ್ಲಿ ಇದು ಪರಿಣಾಮಕಾರಿಯಾಗಿದೆ.
1. ವ್ಯಸನ ಮುಕ್ತಿ
ವಿಪಶ್ಯನದ ಅತ್ಯಂತ ಶಕ್ತಿಯುತವಾದ ಉಪಯೋಗವೆಂದರೆ ವ್ಯಸನಗಳ ಚಿಕಿತ್ಸೆ (addiction medicine). ಕೈದಿಗಳಿಗೆ ಸಹಾಯ ಮಾಡಲು ಜೈಲುಗಳಲ್ಲಿ ದೊಡ್ಡ ಮಟ್ಟದ ಅಧ್ಯಯನಗಳನ್ನು ನಡೆಸಲಾಗಿದೆ.
ಉದಾಹರಣೆಗೆ, 1993 ಮತ್ತು 2000 ರ ನಡುವೆ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 8,000 ಕ್ಕೂ ಹೆಚ್ಚು ಕೈದಿಗಳು ಭಾಗವಹಿಸಿದ್ದರು. ಇದರ ಫಲಿತಾಂಶಗಳು ಕೈದಿಗಳಲ್ಲಿನ ಕೋಪ ಮತ್ತು ಮಾದಕವಸ್ತುಗಳ ಮೇಲಿನ ಬಯಕೆ (craving) ಗಣನೀಯವಾಗಿ ಕಡಿಮೆಯಾಗಿರುವುದನ್ನು ತೋರಿಸಿದವು 4. ಅದೇ ರೀತಿ, ಅಮೆರಿಕಾದ ಜೈಲುಗಳಲ್ಲಿ ನಡೆದ ಅಧ್ಯಯನಗಳು, ಈ ಕೋರ್ಸ್ ಪೂರೈಸಿದ ಕೈದಿಗಳು, ಕೋರ್ಸ್ ಮಾಡದವರಿಗಿಂತ ಒಂದು ವರ್ಷದ ನಂತರ ಮತ್ತೆ ತಪ್ಪು ಮಾಡುವ ಅಥವಾ ವ್ಯಸನಕ್ಕೆ ಜಾರುವ ಪ್ರಮಾಣ ಕಡಿಮೆ ಎಂದು ತೋರಿಸಿವೆ 5 6.
ತಿಹಾರ್ ಜೈಲಿನ ವಿಪಶ್ಯನ ಕಾರ್ಯಕ್ರಮದ ಕುರಿತಾದ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ:
ತಿಹಾರ್ ಜೈಲಿನ ವಿಪಶ್ಯನ ಕಾರ್ಯಕ್ರಮದ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ.
2. ದೀರ್ಘಕಾಲದ ನೋವಿನ ನಿರ್ವಹಣೆ
ದೀರ್ಘಕಾಲದ ನೋವು (chronic pain) ಹೆಚ್ಚಾಗಿ ನಮ್ಮ ಭಾವನಾತ್ಮಕ ಪ್ರತಿಕ್ರಿಯೆಯಿಂದಾಗಿ ನಮಗೆ ಹೆಚ್ಚು ನರಳಾಟವನ್ನು ಉಂಟುಮಾಡುತ್ತದೆ. ನೋವನ್ನು ಕೇವಲ ಒಂದು ಸಂವೇದನೆಯಾಗಿ ವಸ್ತುನಿಷ್ಠವಾಗಿ (objectively) ಗಮನಿಸುವುದನ್ನು ವಿಪಶ್ಯನ ರೋಗಿಗಳಿಗೆ ಕಲಿಸುತ್ತದೆ. ದೈಹಿಕ ಸಂವೇದನೆಯನ್ನು ಮಾನಸಿಕ ನರಳಾಟದಿಂದ ಬೇರ್ಪಡಿಸುವ ಮೂಲಕ, ರೋಗಿಗಳು ಕೇವಲ ನೋವು ನಿವಾರಕಗಳ ಮೇಲೆ ಅವಲಂಬಿತರಾಗದೆ, ನೋವನ್ನು ನಿರ್ವಹಿಸುವುದು ಸುಲಭವಾಗುತ್ತದೆ ಎಂದು ಹಲವಾರು ರೋಗಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಹೋಲಿಕೆ: ವಿಪಶ್ಯನ ಮತ್ತು MBSR (Mindfulness-Based Stress Reduction)
ನೀವು ಆಸ್ಪತ್ರೆಗಳಲ್ಲಿ ಜನಪ್ರಿಯವಾಗಿರುವ MBSR ಬಗ್ಗೆ ಕೇಳಿರಬಹುದು. ವಿಪಶ್ಯನ ಅದಕ್ಕಿಂತ ಹೇಗೆ ಭಿನ್ನವಾಗಿದೆ ಎಂಬುದು ಇಲ್ಲಿದೆ:
- ತೀವ್ರತೆ: ವಿಪಶ್ಯನವು 10 ದಿನಗಳ ವಸತಿ ಶಿಬಿರವಾಗಿದೆ (100 ಗಂಟೆಗಳಿಗೂ ಹೆಚ್ಚು ಧ್ಯಾನ), ಆದರೆ MBSR ಸಾಮಾನ್ಯವಾಗಿ ವಾರಕ್ಕೊಮ್ಮೆ ನಡೆಯುವ 8 ವಾರಗಳ ತರಗತಿಯಾಗಿದೆ (ಒಟ್ಟು ಸುಮಾರು 20-30 ಗಂಟೆಗಳು).
- ಕ್ರಮ: ವಿಪಶ್ಯನವು ದೇಹದ ಅತ್ಯಂತ ಸೂಕ್ಷ್ಮ ಸಂವೇದನೆಗಳ ಕಡೆಗೂ ಆಳವಾದ ಸಮಚಿತ್ತತೆಯನ್ನು (equanimity) ಬೆಳೆಸುವುದರ ಮೇಲೆ ಗಮನಹರಿಸುತ್ತದೆ. MBSR ಸಾಮಾನ್ಯವಾಗಿ ಉಸಿರಾಟದ ಅರಿವು ಮತ್ತು ಒತ್ತಡ ಕಡಿಮೆ ಮಾಡುವುದರ ಮೇಲೆ ಗಮನಹರಿಸುತ್ತದೆ.
- ವೆಚ್ಚ: ವಿಪಶ್ಯನ ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಕೇವಲ ಸ್ವಯಂಪ್ರೇರಿತ ದೇಣಿಗೆಗಳ ಮೇಲೆ ನಡೆಯುತ್ತದೆ. MBSR ಸಾಮಾನ್ಯವಾಗಿ ಉಚಿತವಲ್ಲದ ಕ್ಲಿನಿಕಲ್ ಕಾರ್ಯಕ್ರಮ ಆಗಿರುತ್ತದೆ.
ಯಾರು ಎಚ್ಚರದಿಂದಿರಬೇಕು? (ವಿರೋಧಾಭಾಸಗಳು/Contraindications)
10 ದಿನಗಳ ಕೋರ್ಸ್ ಮಾನಸಿಕವಾಗಿ ಕಠಿಣವಾಗಿರುವುದರಿಂದ, ಇದು ಪ್ರತಿಯೊಬ್ಬರಿಗೂ ಅವರ ಜೀವನದ ಎಲ್ಲಾ ಹಂತಗಳಲ್ಲಿಯೂ ಸೂಕ್ತವಾಗುವುದಿಲ್ಲ. ನಾವು ಅನುಸರಿಸಬೇಕಾದ ಕೆಲವು ಸುರಕ್ಷತಾ ಮಾರ್ಗಸೂಚಿಗಳಿವೆ.
ಸಂಪೂರ್ಣವಾಗಿ ನಿರ್ಬಂಧವಿರುವವರು (ಇವರು ಭಾಗವಹಿಸಲೇಬಾರದು): ಪ್ರಸ್ತುತದಲ್ಲಿ ತೀವ್ರತರವಾದ ಮಾನಸಿಕ ಕಾಯಿಲೆ (active psychosis), ಅಕ್ಯೂಟ್ ಮೇನಿಯಾ, ಅಥವಾ ವಾಸ್ತವದಿಂದ ಕಲ್ಪನೆಗೆ ಜಾರುವಂತಹ ತೀವ್ರವಾದ PTSD (ದುರ್ಘಟನೆಯ ನಂತರದ ಆಘಾತದ ಕಾಯಿಲೆ) ಇರುವವರು ಭಾಗವಹಿಸಬಾರದು. ಅಲ್ಲದೆ, ತೀವ್ರವಾದ ಮಾದಕವಸ್ತು ವ್ಯಸನ ಇರುವವರು ಮೊದಲು ವೈದ್ಯಕೀಯ ಡಿ-ಅಡಿಕ್ಷನ್ (ವ್ಯಸನ ಮುಕ್ತಿ ಚಿಕಿತ್ಸೆ) ಪಡೆಯಬೇಕು.
ಮನೋವೈದ್ಯಕೀಯ ಸಲಹೆಯೊಂದಿಗೆ ಮಾತ್ರ ಭಾಗವಹಿಸಬಹುದಾದವರು): ಗಂಭೀರ ವ್ಯಕ್ತಿತ್ವದ ಅಸ್ವಸ್ಥತೆಗಳು (severe personality disorders) ಇರುವವರು ಅಥವಾ ಇತ್ತೀಚೆಗೆ ದೊಡ್ಡ ಆಘಾತವನ್ನು ಅನುಭವಿಸಿದವರು ಶಿಬಿರಕ್ಕೆ ಹಾಜರಾಗುವ ಮೊದಲು ಮನೋವೈದ್ಯರನ್ನು ಸಂಪರ್ಕಿಸಬೇಕು.
ಸೇರುವುದು ಹೇಗೆ?
ನೀವು ಕೋರ್ಸ್ ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದರೆ, ಪ್ರಪಂಚದಾದ್ಯಂತ ವಿಪಶ್ಯನ ಕೇಂದ್ರಗಳನ್ನು ಕಾಣಬಹುದು. ಎಲ್ಲಾ ಕೋರ್ಸ್ಗಳು ಕೇವಲ ಸ್ವಯಂಪ್ರೇರಿತ ದೇಣಿಗೆಯ ಆಧಾರದ ಮೇಲೆ ನಡೆಯುತ್ತವೆ (ಕೋರ್ಸ್ ಮುಗಿದ ನಂತರ ನಿಮಗೆ ಇಷ್ಟವಿದ್ದರೆ ಮಾತ್ರ ದೇಣಿಗೆ ನೀಡಬಹುದು). ನೀವು ಕೇವಲ ಕೇಂದ್ರಕ್ಕೆ ಹೋಗಿ ಬರುವ ಪ್ರಯಾಣದ ವೆಚ್ಚವನ್ನು ಭರಿಸಬೇಕಾಗುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಮೊಬೈಲ್ ಅಪ್ಲಿಕೇಶನ್ಗಳಿದ್ದು, 10 ದಿನಗಳ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಲು, ದಿನಾಂಕ ಮತ್ತು ಸ್ಥಳಗಳನ್ನು ಆಯ್ಕೆ ಮಾಡಲು ಸುಲಭವಾಗಿದೆ.
Dhamma.org ನಲ್ಲಿ ಕೋರ್ಸ್ ವೇಳಾಪಟ್ಟಿಯನ್ನು ನೀವು ಪರಿಶೀಲಿಸಬಹುದು
Dr. Shashikiran Umakanth (MBBS, MD, FRCP Edin.) is the Professor & Head of Internal Medicine at Dr. TMA Pai Hospital, Udupi, under the Manipal Academy of Higher Education (MAHE). While he has contributed to nearly 100 scientific publications in the academic world, he writes on MEDiscuss out of a passion to simplify complex medical science for public awareness.
Dr. Ravichandra C is the Divisional Head of Human Resource Development (HAG-NFU) at the National Tuberculosis Institute (NTI), Bangalore. A Senior Administrative Grade Medical Officer with the Central Health Service since 1996, he serves as a national-level trainer for RNTCP technical guidelines and the Programmatic Management of Drug Resistant TB (PMDT). He regularly facilitates WHO/SAARC fellowships and guides national-level operational research.
References
- Hart W. The Art of Living: Vipassana Meditation as Taught by S.N. Goenka. 1st ed. New York: HarperOne; 1987.
- Vipassana Research Institute. The Way of Liberation from Suffering [Internet]. Mumbai: VRI; [cited 2024 Jan]. Available from: https://www.vridhamma.org
- Hölzel BK, Lazar SW, Gard T, Schuman-Olivier Z, Vago DR, Ott U. How Does Mindfulness Meditation Work? Proposing Mechanisms of Action from a Conceptual and Neural Perspective. Perspect Psychol Sci. 2011 Nov;6(6):537-59. PubMed Link
- Pariyatti. Doing Time, Doing Vipassana [Documentary]. 1997. Available from: https://www.pariyatti.org
- Bowen S, Witkiewitz K, Dillworth TM, et al. Mindfulness Meditation and Substance Use in an Incarcerated Population. Psychol Addict Behav. 2006;20(3):343-347. PubMed Link
- Simpson TL, et al. Vipassana Meditation: Course completion and 3-month outcomes in a correctional setting. 2008.



